Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Saturday 24 January 2015

ಕಷ್ಟನ ಹೇಳಿಕೊಳ್ಳುವುದೇ ದೊಡ್ಡ ಕಷ್ಟ!



ನಮ್ಮ ಕಷ್ಟ/ನೋವುಗಳನ್ನು ಕೇಳುವ ಜನರಿಲ್ಲವೆಂದು ನಾವು ಇರುವ ವೇದನೆಗಳ ಜೊತೆ ಅದನ್ನು
ಸೇರಿಸಿ ಅನುಭವಿಸುತ್ತೇವೆ. ಆದರೆ,
ನಿಜಕ್ಕೂ ನಮ್ಮ ಕಷ್ಟಗಳನ್ನು ಕೇಳುವವರಿಂದ ಅದಕ್ಕೊಂದು ಸೂಕ್ತವಾದ ಪರಿಹಾರ/ಸಲಹೆ ಕೊಡಲು ಸಾಧ್ಯವೇ ?
ಸಾಧ್ಯ  ಎಂದಾದರೆ, ಅದರ ಪ್ರಮಾಣ ತೀರ ಕಡಿಮೆಯೇ ಆಗಿರುತ್ತದೆ.
ನಮ್ಮ ಕಷ್ಟವನ್ನು ಇನ್ನೊಬ್ಬರಿಗೆ ಹೇಳುವುದರಿಂದ ತುಸು ಮನಸಿನ ಭಾರ ಇಳಿದ ಅನುಭವವಾಗುವುದು ಸಹಜ.
ಆದರೆ ಅದು ಆ ಕ್ಷಣಕ್ಕಷ್ಟೇ, ಅದಾದ ಬಳಿಕ ಬದುಕಿನ ರಣರಂಗದಲ್ಲಿ ಕಷ್ಟದ ಜೊತೆ ನಾವು ಮಾತ್ರವೇ ಯುದ್ಧ ಹೂಡಬೇಕು, ಅಲ್ಲಿ ನಮಗೆಂದು ಯಾರೂ ಇರುವುದಿಲ್ಲಾ.

ಯಾಕೆ ನಮಗೆ ಇನ್ನೊಬ್ಬರು ಸೂಕ್ತವಾದ ಸಲಹೆ/ಸೂಚನೆಗಳು ಕೊಡಲು ಸಾಧ್ಯವಿಲ್ಲವೆಂದರೆ,
ನಮಗಿರುವ ಕಷ್ಟ ಅವರ ಬದುಕಿನಲ್ಲಿ ಒಮ್ಮೆಯೂ ಸಂಭವಿಸದೆ ಇರಬಹುದು.
ನಮಗಾಗಿ ಸಲಹೆ/ಸೂಚನೆಗಳನ್ನು ತಾಳ್ಮೆಯಿಂದ ಕೊಡಲು ಅವರಿಗೆ ಸಮಯದ ಅಭಾವ ಇರಬಹುದು.
ಇರುವೆಯ ಕಷ್ಟ ಆನೆಗೆ ಕಷ್ಟವೇ ಅಲ್ಲ ಎನ್ನುವಂತೆ,
ನಮ್ಮ ಕಷ್ಟ ಅವರಿಗೆ ಒಂದು ದೊಡ್ಡ ಕಷ್ಟವೇ ಅಲ್ಲ ಎನ್ನಿಸಬಹುದು .
ಎಲ್ಲರಿಗೂ ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚಿಸಿ, ಪರಿಹಾರ/ಸಲಹೆ ಕೊಡುವ ಕಲೆ ತಿಳಿದಿರುವುದಿಲ್ಲ.

ಆದುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಕಷ್ಟ/ನೋವುಗಳಿಗೆ ನಾವೇ ಒಂದು ಸೂಕ್ತವಾದ ಪರಿಹಾರ, ಒಳ್ಳೆಯ ಮಾರ್ಗವನ್ನು ಹುಡುಕುವ ಪ್ರಯತ್ನ ಮಾಡಬೇಕು.
ಕಾರಣ ನಮಗಿಂತ ನಮ್ಮನ್ನು ಈ ಜಗತ್ತಿನಲ್ಲಿ ಇನ್ಯಾರಿಂದಲೂ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲಾ.
ನಮ್ಮ ಬಲ, ದೌರ್ಬಲ್ಯ,  ಬದುಕಿನ ವ್ಯಾಪ್ತಿ,
ಹೀಗೆ ನಮ್ಮ ಬಗೆಗಿನ ಪ್ರತಿಯೊಂದು ನಮಗೆ ಮಾತ್ರವೇ ತಿಳಿದಿರಲು ಸಾಧ್ಯವಲ್ಲವೇ ,!

ಇಲ್ಲ ನನ್ನ ತೊಂದರೆಗಳಿಗೆ  ಇನ್ನೊಬ್ಬರು ಒಳ್ಳೆಯ ಸಲಹೆಯನ್ನು ಸೂಚಿಸಬಹುದು
ಎಂದು ನಿಮಗೆ ಅನ್ನಿಸಿದರೆ ,
ಆಗ ಬೇರೆಯವರ  ಬಳಿ ಹೇಳಿಕೊಳ್ಳುವ ಮುನ್ನ ,
ಮೊದಲು ನಿಮ್ಮ ಕಷ್ಟಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿಕೊಳ್ಳಬೇಕು.
                                                                             
ಕೊಡುವ/ಕೊಡಿಸುವ ಮನಸಿರುವವರು? ಯಾರೆಂದು ಯೋಚಿಸಿ,
ಹಣದ ತೊಂದರೆಗಳು, ಕೆಲಸಕ್ಕಾಗಿ ಹುಡುಕಾಡುತ್ತಾ ಇದ್ದರೆ,
ಅವರ ಬಳಿ ಕೇಳಿ ಪರಿಹಾರ/ಸಲಹೆಯನ್ನು ಪಡೆಯಬಹುದು.

(ಈ ವಿಷಯದಲ್ಲಿ ನೋಡಿ ಮಾತನಾಡುವುದು ಒಳ್ಳೆಯದು, ಕೆಲವರು ನಮ್ಮ ಏಳಿಗೆಯಲ್ಲಿ ಕಲ್ಲು ಹಾಕಲು ಕಾಯುತ್ತಾ ಇರುತ್ತಾರೆ, ಅವರ ಕಿವಿಗೆ ನಾವೇ ವಿಷಯ ಮುಟ್ಟಿಸಕೂಡದು)

ನಮ್ಮಿಂದ ಮಾತ್ರವೇ ಸಾಧ್ಯ.
ಪ್ರೀತಿ/ಪ್ರೇಮದ ವಿಷಯಗಳು ನಾವು ಒಬ್ಬರನ್ನು ಎಷ್ಟು ಮತ್ತು ಎಲ್ಲಿಯವರೆಗೂ ಪ್ರೀತಿಸಬೇಕು
ಎನ್ನುವುದನ್ನು ಇನ್ನೊಬ್ಬರು ಹೇಳಲು ಸಾಧ್ಯವಿಲ್ಲ ,
ಪ್ರೀತಿಯನ್ನು ನಿರಾಕರಿಸಿದವರನ್ನು ನೀವು ನಿರಾಕರಿಸಿ ಎಂದೇಳಿ ಹೋಗಿ ಬಿಡುತ್ತಾರೆ ,
ಆದರೆ ನಮ್ಮ ಮನಸ್ಸು ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇದೆಯೇ ?
ಅದರಿಂದ, ಪ್ರೀತಿಯನ್ನು ಪಡೆಯಲು ಎಲ್ಲಿಯವರೆಗೂ ಹೋರಾಡಬೇಕು ಎನ್ನುವ ಇತಿ/ಮಿತಿಗಳನ್ನು
ನಿಮಗೆ ನೀವು ಮಾತ್ರವೇ ಅಳವಡಿಸಿಕೊಳ್ಳಲು ಸಾಧ್ಯ!

(ನಮ್ಮ ಭಾವನೆಗಳಿಗೆ ನಮ್ಮಿಂದ ಮಾತ್ರವೇ ಬೆಲೆ ಕಟ್ಟಲು ಸಾಧ್ಯವಾಗುವುದು)

ಸಂಸಾರದಲ್ಲಿನ ಗುಟ್ಟನ್ನು ಬೇಗಾ ರಟ್ಟು ಮಾಡಬೇಡಿ,
ನಾಲಕ್ಕು ಗೋಡೆಯ ಒಳಗೆ ನಡೆಯುವ ನಿಮ್ಮ ಸಂಸಾರದ ವಿಷಯ
ಇನ್ನೊಬ್ಬರಿಗೆ ಅರ್ಥವಾಗಲು ಹೇಗೆ ತಾನೇ ಸಾಧ್ಯ ?
ಕುಟುಂಬದಲ್ಲಿನ ತೊಂದರೆಗಳಿಗೆ ಸಾಧ್ಯವಾದಷ್ಟು  ನೀವೇ ಪರಿಹಾರ ಹುಡುಕಲು ಯತ್ನಿಸಿ.
(ಸೂಕ್ಷ್ಮವಾಗಿರುವ ವಿಷಯವನ್ನು ಜಾಣ್ಮೆಯಿಂದ ಬಗೆಹರಿಸಿ)

ನೋವು/ಕಷ್ಟವೆನ್ನುವುದು ರುಚಿಯಂತೆ
ಅನುಭವಿಸಲು ಮಾತ್ರವೇ ಸಾಮರ್ಥ್ಯವಿರುವ ನಮಗೆ
ಅದನ್ನು ಇನ್ನೊಬ್ಬರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲಾ.

ನೊಂದ ಮನಸಿಗೆ ಒಂದು ಮಾತನ್ನು ಹೇಳುತ್ತಾ ಇರಬೇಕು ,
ನಾವಾಡುವ ಉಸಿರೇ ನಿರಂತರವಲ್ಲಾ, ಇನ್ನು ಈ ಕಷ್ಟ ಕಣ್ಣೀರು ನಿರಂತರವೇ?
ಇಂದು ಅತಿದೊಡ್ಡ ಕಷ್ಟ ಎನ್ನಿಸುವುದು ಮುಂದೊಂದು ದಿನ ನೆನೆದಾಗ ನಗು ತರಿಸುತ್ತದೆ.
              

ಬದುಕು ಎಂದರೆ ಕಷ್ಟ ಇರುತ್ತೆ , ಮನೆ ಎಂದರೆ ಕಸ ಸೇರುತ್ತೆ!

ನಾವು ಮನೆಗೆ ಬರುವವರಿಗೆಲ್ಲಾ ಕಸ ಕೊಟ್ಟು ಕಳುಹಿಸುವುದಿಲ್ಲ,
ಅದನ್ನ ಯಾರು ತೆಗೆದುಕೊಂಡು ಹೋಗಲು ಬರುತ್ತಾರೋ  
ಅವರ ಬಳಿಯಷ್ಟೇ ಕೊಟ್ಟು ಕಳುಹಿಸುತ್ತೇವೆ!

ಹಾಗೆ, ಕಷ್ಟವನ್ನು ಕೂಡ  ಸಿಕ್ಕ ಸಿಕ್ಕವರಿಗೆಲ್ಲಾ ಹೇಳಬಾರದು
ನಮ್ಮ ಕಷ್ಟವನ್ನು ಕೇಳುವ ಒಂದು ಮನಸಿರುತ್ತದೆ  ಅದರ ಬಳಿಯಷ್ಟೇ ಹೇಳಬೇಕು.

ಮನೆಗೆ ಬರುವವರೆಲ್ಲರ ಕೈಯಲ್ಲೂ ಕಸ ಕೊಟ್ಟು
ಕಳುಹಿಸಿದರೆ ಒಂದು ದಿನ  ನಮ್ಮ ಮನೆಗೆ ಯಾರೂ ಬರೋದಿಲ್ಲ!
ಸಿಕ್ಕವರ ಬಳಿಯೆಲ್ಲಾ ಕಷ್ಟವನ್ನು ಹೇಳಿಕೊಂಡರೆ ಒಂದು ದಿನ
ನಮಗೆ ಅಂತ ಯಾರೂ ಇರೋದಿಲ್ಲ!

-ಪ್ರಕಾಶ್ ಶ್ರೀನಿವಾಸ್  

2 comments:

  1. Onedhu Olle Vicharadha Lekana chennagidhe :) Padma Priya

    ReplyDelete
  2. ಕಷ್ಟವೆನ್ನುವುದು ರುಚಿಯಂತೆ ಸತ್ಯವಾದ ಮಾತು sir ---ಅನುಸರಸ್ವತಿ

    ReplyDelete